ಅಕ್ರಂ ಖಾನ್ ಅಲಿಯಾಸ್ ಅಕ್ರಂ ಎಂಬ ರೌಡಿಪಟ್ಟಿಯ ವ್ಯಕ್ತಿಯನ್ನು ಪೊಲೀಸರು ಕಲಬುರಗಿ ಕಾರಾಗೃಹಕ್ಕೆ ಅತಿಥಿಯಾಗಿ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 2011ರಿಂದಲೂ ನಿರಂತರವಾಗಿ ಕೊಲೆ ಯತ್ನ, ಹಲ್ಲೆ, ಸುಲಿಗೆ, ಸಾಕ್ಷಿಗಳಿಗೆ ಬೆದರಿಕೆ, ಕಳುವು, ದರೋಡೆಗೆ ಸಿದ್ದತೆ ಹೀಗೆ ಅಪರಾಧಗಳ ಎಲ್ಲಾ ವಿಭಾಗಗಳಲ್ಲಿಯೂ ತನ್ನದೇ ಪಾರುಪತ್ಯ ಮೆರೆಯುತ್ತಿದ್ದ ಅಕ್ರಂ 21 ಪ್ರಕರಣಗಳಲ್ಲಿ ಆರೋಪಿಯಾಗಿದ್ದನು. ಜಾಮೀನಿನ ನಂತರವೂ ವಿಚಾರಣೆಗೆ ಹಾಜರಾಗದೆ ಕಿಡಿಗೇಡಿ ಕೃತ್ಯಗಳನ್ನು ಮುಂದುವರಿಸುತ್ತಿದ್ದರಿಂದ, 6 ಪ್ರಕರಣಗಳಲ್ಲಿ ಜಾಮೀನು ರಹಿತ ದಸ್ತಗಿರಿ ವಾರೆಂಟ್ ಮತ್ತು 2 ಪ್ರಕರಣಗಳಲ್ಲಿ ಘೋಷಿತ ಅಪರಾಧಿ ( ಪ್ರೋಕ್ಲಮೇಶನ್ ) ಹೊರಡಿಸಲಾಗಿತ್ತು.
ಇನ್ನು ಈತನ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸಲು ಗೋವಿಂದಪುರ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಸ್ತಾವನೆಯನ್ನು ಕೆಜಿ ಹಳ್ಳಿ ಉಪವಿಭಾಗದ ಎಸಿಪಿ ಮತ್ತು ಪೂರ್ವ ವಿಭಾಗದ ಡಿಸಿಪಿರವರು ಬಂಧನಕ್ಕೆ ಶಿಫಾರಸ್ಸು ಮಾಡಿದ್ದರು. ಇದರಿಂದ ಪೊಲೀಸ್ ಆಯುಕ್ತರ ಆದೇಶದಂತೆ 6ನೇ ಫೆಬ್ರವರಿಯಂದು 35 ವರ್ಷದ ಮಹಮ್ಮದ್ ಅಕ್ರಂ @ ಅಕ್ರಂ ಖಾನ್ @ ಅಕ್ಕುಬಾ ನನ್ನು ಬಂಧಿಸಿ, ಕಲಬುರಗಿ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.
ಏನಿದು ಗೂಂಡಾ ಕಾಯ್ದೆ :-
ಕರ್ನಾಟಕ ಗೂಂಡಾ ಕಾಯ್ದೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಕಾಯ್ದೆಯು “ಕರ್ನಾಟಕ ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆ,1985” ರಲ್ಲಿ ಜಾರಿಗೆ ಬಂದಿತು. ಈ ಕಾಯ್ದೆ ಸಮಾಜದಲ್ಲಿನ ಅಪಾಯಕಾರಿ ಮತ್ತು ಸಾರ್ವಜನಿಕ ವಿರೋಧಿ ಕೃತ್ಯಗಳನ್ನು ನಡೆಸುವ ವ್ಯಕ್ತಿಗಳನ್ನು ಬಂಧಿಸುವ, ಆಸ್ತಿಗಳನ್ನು ಜಪ್ತಿ ಮಾಡುವ ಮತ್ತು ನಿಯಂತ್ರಿಸುವ ಅಧಿಕಾರಗಳನ್ನು ಪೊಲೀಸರಿಗೆ ನೀಡುತ್ತದೆ.
ವರದಿ : ಮೋಹನ್






