ದುರುಳ ಪತಿಯೊಬ್ಬ ತನ್ನ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಆಕೆಯ ಕಾಲು ಕತ್ತರಿಸಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸದ್ದುಗುಂಟೆಪಾಳ್ಯದ ಭವಾನಿ ನಗರದ ನಿವಾಸಿ ಅನಿತಾ ಮೇರಿ ಎಂಬಾಕೆಯೇ ಪತಿಯ ದಾಳಿಯಿಂದ ಸಂಕಷ್ಟದಲ್ಲಿರುವವರಾಗಿದ್ದಾರೆ.
38 ವರ್ಷದ ಪತಿ ಸಂತೋಷ್ ಕುಮಾರ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಸಂತೋಷ್ ಕುಮಾರ್ ಪೇಂಟಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಪತ್ನಿ ಅನಿತಾ ಮೇರಿ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.
ಇವರಿಗೆ 10 ವರ್ಷದ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಇವರು ಮೊದಲು ಸುಬ್ರಮಣ್ಯ ನಗರದಲ್ಲಿ ವಾಸವಿದ್ದರು.. ಆದ್ರೆ ಕುಡಿದುಬರುತ್ತಿದ್ದ ಗಂಡ ಹಲ್ಲೆ ಮಾಡುತ್ತಿದ್ದನಂತೆ. ಹೀಗಾಗಿ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲೂ ಎರಡು ಬಾರಿ ಪತ್ನಿ ಕಂಪ್ಲೇಂಟ್ ಕೊಟ್ಟಿದ್ದಳು.
ಗಂಡನ ಕಿರುಕುಳ ತಾಳಲಾರದೇ ಅನಿತಾ ಮೇರಿ ಮಕ್ಕಳೊಂದಿಗೆ ಭವಾನಿನಗರಕ್ಕೆ ಬಂದು ವಾಸವಿದ್ದಳು.ನಂತರ ಪತ್ನಿ ಜೊತೆ ಸಂಧಾನ ಮಾಡಿಕೊಂಡ ಆರೋಪಿ ಕೆಲ ದಿನಗಳಿಂದ ಆಕೆಯ ಜೊತೆಗೇ ವಾಸವಿದ್ದ. ಆದ್ರೆ ಅದೇನಾಯ್ತೋ ಏನೋ ಮತ್ತೆ ಶೀಲ ಶಂಕಿಸಿ ಈ ಕೆಲಸ ಮಾಡಿದ್ದಾನೆ.
ಅನಿತಾ ಬಲಗಾಲಿಗೆ ಗಂಭಿರವಾಗಿ ಗಾಯವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಅನಿತಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಇತ್ತ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.






